ಮಂಗಳವಾರ, ಡಿಸೆಂಬರ್ 13, 2016

ಉದಯೋನ್ಮುಖ ಬರಹಗಾರ: ಕೆ.ಎನ್.ಅಕ್ರಂಪಾಷ

akram pasha kannada kavivani

ಚಿಂತಾಮಣಿ ನಗರದ ನಿವಾಸಿಯಾಗಿರುವ ಕೆ.ಎನ್.ಅಕ್ರಂಪಾಷ ರವರು ಉದಯೋನ್ಮುಖ ಬರಹಗಾರರಾಗಿ ದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಇವರು ಶಾಲೆಯಲ್ಲಿ ನಡೆಯುವ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

    ತನ್ನ ಮಾತೃಭಾಷೆ ಉರ್ದು ಆಗಿದ್ದರೂ ಸಹ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೂ ,ಪ್ರೌಢ ಶಾಲಾ ಶಿಕ್ಷಣ ಹಾಗು ಪದವಿ ಪೂರ್ವ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲೂ ಪಡೆದರೂ ಕನ್ನಡ ಭಾಷೆಯ ಮೇಲೆ ಅಪಾರ ಅಭಿಮಾನ ಹೊಂದಿದವರಾಗಿದ್ದರು.ಶಾಲಾ-ಕಾಲೇಜುಗಳಲ್ಲಿ ಕನ್ನಡ ವಿಷಯವನ್ನು ಪ್ರಥಮಭಾಷೆಯಾಗಿ ತೆಗೆದುಕೊಂಡು ಉತ್ತಮ ಅಂಕಗಳನ್ನು ಗಳಿಸಿ ಸೈ ಎನಿಸಿಕೊಂಡರು.

    ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿದ್ದ ಇವರಿಗೆ ಸೂಕ್ತ ಅವಕಾಶಗಳು ಸಿಕ್ಕಿರಲಿಲ್ಲ.ಹೀಗಿರುವಾಗ ಚಿಂತಾಮಣಿಯ ಕನ್ನಡ ಸಾಹಿತ್ಯ ವೇದಿಕೆ ಹಾಗು ಚುಟುಕು ಸಾಹಿತ್ಯ ಪರಿಷತ್ತಿನ ಸಂಪರ್ಕ ಸಿಕ್ಕಿತು.ಅಲ್ಲಿ ಇವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಹಾಗು ಅವಕಾಶಗಳು ದೊರೆತವು. ಇದರಿಂದಾಗಿ ಅಕ್ರಂಪಾಷರವರು ಕನ್ನಡದಲ್ಲಿ ತನ್ನ ಸಾಹಿತ್ಯ ಕೃಷಿಯನ್ನು ಮುಂದುವರಿಸಲು ಸಾಧ್ಯವಾಯಿತು.

   ಈಗಾಗಲೇ ಅವರು ರಚಿಸಿರುವ ಮಕ್ಕಳಕಥೆ,ಕವನ,ಲೇಖನ,ಚುಟುಕುಗಳು ರಾಜ್ಯದ ಹಲವು ದಿನಪತ್ರಿಕೆ,ಮಾಸಪತ್ರಿಕೆ,ಸ್ಮರಣ ಸಂಚಿಕೆ ಹಾಗು ಕವನ ಮತ್ತು ಚುಟುಕು ಸಂಕಲನಗಳಲ್ಲಿ ಪ್ರಕಟಗೊಂಡಿವೆ.ಅದರಲ್ಲೂ ಮುಖ್ಯವಾಗಿ ಅವರು ಬರೆದಿರುವ ಮಕ್ಕಳ ಕಥೆಗಳು ಜನಪ್ರಿಯವಾಗಿವೆ.

   ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಕವಿಗೋಷ್ಠಿ ಹಾಗು ಇನ್ನಿತರೆ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವರಚಿತ ಚುಟುಕು ಹಾಗು ಕವನಗಳನ್ನು ವಾಚಿಸಿ ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ಅವರು ಹಾಸ್ಯ ಕಲೆಯನ್ನು ರೂಢಿಸಿಕೊಂಡಿದ್ದಾರಲ್ಲದೆ ಚಿತ್ರ ಕಲೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
   ಕಥೆ,ಲೇಖನ,ಕವನಗಳಿಗೆ ಸಂಬಂಧಿಸಿದಂತೆ ರೇಖಾ ಚಿತ್ರಗಳನ್ನು ತಾವೇ ರಚಿಸಿಸುವುದು ಇವರ ಮತ್ತೊಂದು ವೈಶಿಷ್ಟ್ಯವಾಗಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

  ಈಗಾಗಲೇ ಇವರ ಲೇಖನಿಯಿಂದ ಇಪ್ಪತೈದಕ್ಕೂ ಹೆಚ್ಚು ಮಕ್ಕಳ ಕಥೆಗಳು ಮೂಡಿಬಂದಿವೆ.ಮೈಸೂರಿನ ಪ್ರಕಾಶನ ಸಂಸ್ಥೆಯೊಂದು ಇವರು ರಚಿಸಿರುವ ಮಕ್ಕಳ ಕತೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ  ಹೊರತರಲು ಮುಂದಾಗಿರುವುದು ಇವರ ಸಾಹಿತ್ಯ ಕೃಷಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

  ಸಧ್ಯಕ್ಕೆ ಚಿಂತಾಮಣಿ ನಗರದ ಸರ್ಕಾರಿ ಬಾಲಕರ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಕ್ರಂಪಾಷರವರು ಆಂಗ್ಲ ಮಾಧ್ಯಮದ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದರೂ ಸಹ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿರುವುದಲ್ಲದೆ ಇತರರಿಗೆ ಮಾದರಿಯೂ ಆಗಿದೆ.
   
(ಲೇಖನ:- ರಾಮೇಶ್, ಚಿಂತಾಮಣಿ - ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ