ಬುಧವಾರ, ಡಿಸೆಂಬರ್ 13, 2017

ನಿಧಾನವೇ ಪ್ರಧಾನ - ಸಣ್ಣ ಕಥೆ

ವಿದ್ಯಾರಣ್ಯಪುರ ಎಂಬ ನಗರದಲ್ಲಿ ಶಂಕರ ಭಟ್ಟ ಎಂಬ ವ್ಯಾಪಾರಿ ವಾಸಿಸುತ್ತಿದ್ದನು. ಆತನು ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಹಣ್ಣು ,ತರಕಾರಿ,ಹೂವು ಮುಂತಾದವುಗಳನ್ನು ಖರೀದಿಸಿಕೊಂಡು ಮತ್ತೆ ವಿದ್ಯಾರಣ್ಯಪುರಕ್ಕೆ ಬಂದು ಮಾರುತ್ತಿದ್ದನು. ಒಂದು ಸಾರಿ ಸೀತಾಪುರ ಎಂಬ ಗ್ರಾಮದಲ್ಲಿ ತೆಂಗಿನ ಕಾಯಿಗಳು ಅತಿ ಕಡಿಮೆ ಬೆಲೆಗೆ ದೊರಕುತ್ತಿವೆ ಎಂಬ ವಿಷಯ ತಿಳಿದ ಆ ಗ್ರಾಮಕ್ಕೆ ಹೋಗಿ ಹೆಚ್ಚು ತೆಂಗಿನ ಕಾಯಿಗಳನ್ನು ಕೊಳ್ಳುತ್ತಾನೆ. ಅವನ್ನು ತನ್ನ ಎತ್ತಿನ ಬಂಡಿಗೆ ತುಂಬಿಸಿ ಮತ್ತೆ ವಿದ್ಯಾರಣ್ಯಪುರಕ್ಕೆ  ಹೊರಟನು ಭಟ್ಟ.

 ಸೀತಾಪುರ ಗ್ರಾಮ ಶಂಕರ ಭಟ್ಟನಿಗೆ ಹೊಸತು ಆದ್ದರಿಂದ ಹಿಂತಿರುಗಿ ಹೋಗುವ ದಾರಿ ಅವನಿಗೆ ಗೊತ್ತಾಗಲಿಲ್ಲ. ದಾರಿಯಲ್ಲಿ ಒಬ್ಬ ಬಾಲಕ ಕುರಿಗಳನ್ನು ಮೇಯಿಸುತ್ತಿರುವುದು ಕಾಣಿಸಿತು. ಶಂಕರಭಟ್ಟ ಆ ಬಾಲಕನಿಗೆ ಕರೆದು ವಿದ್ಯಾರಣ್ಯ ಪುರಕ್ಕೆ ಹೋಗುವ ದಾರಿ ಇದೇನಾ?ಎಂದು ಕೇಳಿದನು. ಹೌದುಎಂದನು ಆ ಬಾಲಕ. ವಿದ್ಯಾರಣ್ಯಪುರಕ್ಕೆ ಹೋಗಿ ಸೇರಲು ಎಷ್ಟು ಸಮಯ ಹಿಡಿಯುತ್ತದೆ ಎಂದು ಕೇಳಿದನು ಶಂಕರಭಟ್ಟ.
  ನಿಧಾನವಾಗಿ ಹೋದರೆ ಒಂದು ತಾಸು ಹಿಡಿಯುತ್ತದೆ,ವೇಗವಾಗಿ ಹೋದರೆ ಎರಡು ತಾಸು ಹಿಡಿಯುತ್ತದೆಎಂದನು ಬಾಲಕ. ಅವನ ಮಾತನ್ನು ಕೇಳಿದ ಶಂಕರಭಟ್ಟ ಅಯ್ಯೋ ಮೂರ್ಖಎಂದು ಹೇಳಿ ಬಂಡಿಯನ್ನು  ವೇಗವಾಗಿ ಓಡಿಸುತ್ತ ಹೋರಟನು.

ಸ್ವಲ್ಪ ದೂರ ತಲುಪುತ್ತಲೆ ಬಂಡಿಯ ಚಕ್ರಕ್ಕೆ ಒಂದು ಕಲ್ಲು ಅಡ್ಡ ಬಂದಿತು ಅದರಿಂದ ಬಂಡಿ ಪಕ್ಕಕ್ಕೆ ವಾಲಿ ಬಂಡಿಯಲ್ಲಿದ್ದ ತೆಂಗಿನ ಕಾಯಿಗಳೆಲ್ಲ ಚಲ್ಲಾಪಿಲ್ಲಿಯಾಗಿ ನೆಲಕ್ಕೆ ಬಿದ್ದವು. ಬಂಡಿಯಿಂದ ಇಳಿದ ಭಟ್ಟ ಅವುಗಳನ್ನೆಲ್ಲ ಮತ್ತೆ ಬಂಡಿಗೆ ತುಂಬಿಸಿ ಬಂಡಿಯ ಚಕ್ರವನ್ನು ಸರಿಪಡಿಸಿ ವಿದ್ಯಾರಣ್ಯಪುರಕ್ಕೆ ಹೋಗಿ ಸೇರಲು ಎರಡು ತಾಸು ಹಿಡಿಯಿತು.


   ಆ ಕುರಿ ಮೇಯಿಸುವ ಬಾಲಕನು ಹೇಳಿದ ಮಾತುಗಳ ಅರ್ಥ ಶಂಕರಭಟ್ಟನಿಗೆ ಆಗ ಅರ್ಥವಾಯಿತು. ಸ್ವಲ್ಪ ನಿಧಾನವಾಗಿ ಬಂಡಿ ಓಡಿಸಿದ್ದಿದ್ದರೆ ಒಂದು ತಾಸಿನಲ್ಲಿ ವಿದ್ಯಾರಣ್ಯಪುರ ತಲುಪುತ್ತಿದ್ದ,ವೇಗವಾಗಿ ಓಡಿಸಿದ ಪರಿಣಾಮವಾಗಿ ಬಂಡಿಯ ಚಕ್ರಕ್ಕೆ ಕಲ್ಲು ಅಡ್ಡ ಬಂದು ಅಲಸ್ಯವಾಯಿತು. ನಿಧಾನವೇ ಪ್ರಧಾನಎಂಬ ಮಾತಿಗೆ ಅರ್ಥ ಶಂಕರ ಭಟ್ಟನಿಗೆ ಆ ರೀತಿಯಾಗಿ ಅರ್ಥವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ